Slide
Slide
Slide
previous arrow
next arrow

ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಲು ಕೀಳರಿಮೆ ಬೇಡ : ಜಿ.ಎಸ್. ಭಟ್ಟ ಉಪ್ಪೋಣಿ ಸಲಹೆ

300x250 AD

ಶಿರಸಿ: ಕೀಳರಿಮೆಯನ್ನು ಹೊಂದದೆ ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರು ಮುಂದಾಗಬೇಕು. ಮನಸ್ಸು ಗ್ರಹಿಸುವ ಭಾಷೆಯಲ್ಲಿ ಶಿಕ್ಷಣವನ್ನು ನೀಡಿದರೆ ಮಕ್ಕಳು ವಿಕಸನಗೊಳ್ಳುತ್ತಾರೆ ಎನ್ನುವುದಾಗಿ ಅಕಾಡೆಮಿಕ್ ಸೆಲ್ ಅಧ್ಯಕ್ಷ ಜಿ.ಎಸ್. ಭಟ್ಟ ಉಪ್ಪೋಣಿ ಹೇಳಿದರು.
ನಗರದ ಎಂಇಎಸ್‌ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವ ಮತ್ತು ಎಸ್ಎಸ್‌ಎಲ್‌ಸಿಯಲ್ಲಿ ರ‌್ಯಾಂಕ್ ಪಡೆದ ಶಾಲೆಯ ಪೂರ್ವ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾತೃ ಭಾಷೆಯ ಅರಿವಿಲ್ಲದಿದ್ದರೆ ಬೇರೆ ಭಾಷೆಯ ಕಲಿಯುವಿಕೆಯು ಕುಂದುತ್ತದೆ. ಐದನೇ ತರಗತಿಯ ವರೆಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎನ್ನುವುದಾಗಿ ರಾಷ್ಟ್ರೀಯ ಶಿಕ್ಷಣ ನೀತಿಯೂ ಹೇಳುತ್ತದೆ ಎಂದು ತಿಳಿಸಿದರು.
ಎಂಇಎಸ್ ಕನ್ನಡ ಮಾಧ್ಯಮ ಕಿರಿಯ ಶಾಲೆಯಲ್ಲಿ ಯೋಗ, ಆಟ, ಪಾಠ ಎಲ್ಲವನ್ನು ಉತ್ತಮ ರೀತಿಯಲ್ಲಿ ನೀಡಲಾಗುತ್ತಿದೆ. ಇಲ್ಲಿ ಭಾವನೆಯ ಮೂಲಕ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಲೋಕಧ್ವನಿ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ ಮಾತನಾಡಿ, ಶಿಕ್ಷಣ ಎನ್ನುವುದು ಬದುಕಿನಲ್ಲಿ ನೆಲೆಗೊಳ್ಳಲು ಬೇಕಾದ ವೇದಿಕೆ. ಬದುಕಿನಲ್ಲಿ ಬುದ್ದಿವಂತಿಕೆ ಮತ್ತು ಸ್ವಸಾಮರ್ಥ್ಯದಿಂದ ನೆಲೆ ನಿಲ್ಲಲು ಸಾಧ್ಯವಾಗುತ್ತದೆ. ಶಿಕ್ಷಣ ಎನ್ನುವುದು ಅಲ್ಲಿಗೆ ತಲುಪಲು ಬೇಕಾದ ಮೆಟ್ಟಿಲು. ಹಾಗಾಗಿ ಶಿಕ್ಷಣ ಯಾವ ಮಾಧ್ಯಮದಲ್ಲಿ ಕಲಿತೆ ಎನ್ನುವುದಕ್ಕಿಂತ ಕಲಿತಿದ್ದನ್ನು ಎಷ್ಟು ಚೆನ್ನಾಗಿ ಕಲಿತಿದ್ದೀಯಾ ಎನ್ನುವುದು ಮುಖ್ಯವಾಗುತ್ತದೆ. ಕನ್ನಡ ಶಾಲೆಗೆ ಮಕ್ಕಳನ್ನು ಕಲಿಸಲು ಕೀಳರಿಮೆ ಇರಬಾರದು. ಅಲ್ಲದೆ, ಮಕ್ಕಳು ಫ್ಯಾಕ್ಟರಿ ಉತ್ಪನ್ನವಲ್ಲ. ನಲಿಯುತ್ತ ಕಲಿಯಬೇಕು ಎಂದರು.
ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳಲ್ಲಿ ಕಾಣುವ ಆತ್ಮವಿಶ್ವಾಸವನ್ನು ಅನ್ಯ ಮಾಧ್ಯಮದಲ್ಲಿ ಕಲಿತ ಮಕ್ಕಳಲ್ಲಿ ಕಾಣ ಸಿಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಪಾಲಕರು ತಾವು ಹೇಗೆ ಕಲಿತಿದ್ದೇವೆ ಎಂಬುದನ್ನು ಅರಿತು, ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು ಎಂದ ಅವರು, ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಅವರು ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಶಾಲಾ ಉಪಸಮಿತಿ ಅಧ್ಯಕ್ಷ ಶಿವಾನಂದ ವಿ. ಶಿವನಂಜಿ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಕರ ವೃಂದವನ್ನು ಹೊಂದಿದೆ. ಊಟ, ಪುಸ್ತಕವನ್ನು ಉಚಿತ ನೀಡಲಾಗುತ್ತಿದೆ. ಇದರ ಸದ್ಬಳಕೆಯನ್ನು ಜನರು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ, 65 ವರ್ಷಗಳಿಂದ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತ ಬಂದಿದೆ. ಪಾಲಕರು ತಮ್ಮ ಮಕ್ಕಳನ್ನು ನಮ್ಮ ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಕಳುಹಿಸುತ್ತಿದ್ದಾರೆ. ಎಂಇಎಸ್ ಶಿಕ್ಷಣ ಸಂಸ್ಥೆಗೆ ಎಲ್‌ಕೆಜಿಗೆ ಸೇರಿಸಿದರೆ, ಮಾಸ್ಟರ್ ಡಿಗ್ರಿ ವರೆಗೂ ಶಿಕ್ಷಣ ಪಡೆಯಬಹುದು. ನಾವು ಮಾತೃ ಭಾಷೆಯ ಕಲಿಕೆಗೆ ಉತ್ತೇಜನ ನೀಡುತ್ತಿದ್ದೇವೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ರ‌್ಯಾಂಕ್ ಪಡೆದ ಎಂಇಎಸ್ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ಶಮಿತಾ ದೇವಾಡಿಗ, ಸೃಷ್ಟಿ ಪಾಗೋಜಿ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಶಾಲೆಯ ಕುರಿತು ಚುಟುಕಾಗಿ ಭಾಷಣ ಮಾಡಿದರು.
ಉಪ ಸಮಿತಿ ಸದಸ್ಯ ಸತೀಶ ಹೆಗಡೆ ಇದ್ದರು. ಮುಖ್ಯಾಪಾಧ್ಯಾಯಿನಿ ಹೇಮಲತಾ ಶೆಟ್ಟಿ ಸ್ವಾಗತಿಸಿದರು. ಕು. ಅನಘ, ಕು.ಅನನ್ಯ ಹೆಗಡೆ ಪ್ರಾರ್ಥಿಸಿದರು. ಸಹ ಶೀಕ್ಷಕಿಯರು ಸ್ವಾಗತ ಗೀತೆ ಹಾಡಿದರು. ಸಹಶಿಕ್ಷಕ ಪ್ರಶಾಂತ ಚಿಕ್ಕಣ್ಣನವರ ವಂದಿಸಿದರು. ಸಹ ಶಿಕ್ಷಕಿ ಗೀತಾ ಟಿ.ಎಲ್. ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top